ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್ಎಸ್ ಒತ್ತಾಯ
ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಮಾವು ಬೆಳೆಗಾರರು ಈ ಬಾರಿ ಹಿಂದೆಂದೂ ಕಾಣದಂತಹ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪ್ರತಿ ಎಕರೆಗೆ ಕನಿಷ್ಠ 40,000 ರೂಪಾಯಿಗಳ ಬೆಳೆ ನಷ್ಟ ಪರಿಹಾರ ಘೋಷಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಆಗ್ರಹಿಸಿದೆ. ಸೋಮವಾರ ಶ್ರೀನಿವಾಸಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಾವು ಬೆಳೆಗಾರರ ಸಂಘದ ರಾಜ್ಯ ಸಂಚಾಲಕರಾದ ಪಿ ಆರ್ ಸೂರ್ಯನಾರಾಯಣ ಜಿಲ್ಲೆಯ ಮಾವು ಬೆಳೆಗಾರರ ದಯನೀಯ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಜಿಲ್ಲೆಯ ಮಾವಿನ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ. 100 ರಷ್ಟು ಹೂವು ಬಂದಿದ್ದರೂ, ಕೇವಲ ಶೇ. 10 ರಿಂದ 15 ರಷ್ಟು ಮಾತ್ರ ಕಾಯಿ ಕಾಣಿಸಿಕೊಂಡಿದೆ. ಅತಿಯಾದ ತಾಪಮಾನ ಹಾಗೂ ಕೀಟಬಾಧೆಯಿಂದಾಗಿ ಶೇ. 70 ರಿಂದ 80 ರಷ್ಟು ಫಸಲು ನಾಶವಾಗುವ ಭೀತಿ ಎದುರಾಗಿದೆ.
ಪ್ರತಿ ಎಕರೆಗೆ ಉಳುಮೆ, ಗೊಬ್ಬರ, ಔಷಧ ಸಿಂಪರಣೆ ಹಾಗೂ ಕಾವಲು ಸೇರಿದಂತೆ ಕನಿಷ್ಠ 20 ರಿಂದ 25 ಸಾವಿರ ರೂಪಾಯಿಗಳ ಖರ್ಚು ತಗಲುತ್ತಿದೆ. ಆದರೆ ಫಸಲು ಇಲ್ಲದ ಕಾರಣ ಬೆಳೆಗಾರರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ.
ಫಸಲ್ ಬಿಮಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ, ಬೆಳೆ ವಿಮೆ ಮಾಡಿಸಿರುವ ರೈತರಿಗೆ ವಿಮಾ ಕಂಪನಿಗಳಿಂದ ಶೀಘ್ರವಾಗಿ ಪರಿಹಾರ ಕೊಡಿಸಲು ಜಿಲ್ಲಾಡಳಿತ ಮುಂದಾಗಬೇಕು. ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯದಿಂದ ಅಂತರ್ಜಲ ಕುಸಿದಿದ್ದು, ಮಾವಿನ ಮರಗಳು ತೇವಾಂಶದ ಕೊರತೆಯಿಂದ ಚಿಗುರೊಡೆಯದೆ ಹಳದಿ ಬಣ್ಣಕ್ಕೆ ತಿರುಗುತ್ತಿವೆ.
“ರಾಜ್ಯದಲ್ಲೇ ಮಾವು ಬೆಳೆಯುವಲ್ಲಿ ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಆದರೆ ಸತತ ಬೆಲೆ ಕುಸಿತ ಮತ್ತು ಈ ವರ್ಷದ ಪ್ರಕೃತಿ ವಿಕೋಪದಿಂದಾಗಿ ರೈತರು ಬೀದಿಗೆ ಬೀಳುವಂತಾಗಿದೆ. ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸದಿದ್ದರೆ ರೈತರ ಬದುಕು ದುಸ್ತರವಾಗಲಿದೆ,” ಎಂದು ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷರಾದ ಪೀಲೆರ್ ಸೂರ್ಯನಾರಾಯಣ ಆತಂಕ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಪಕೋಟಿ ನವೀನ್ ಕುಮಾರ್, ತಾಲೂಕು ಕಾರ್ಯದರ್ಶಿ ಸೈಯದ್ ಫಾರೂಖ್, ಮತ್ತು ತಾಲೂಕು ಅಧ್ಯಕ್ಷ ಸೋಮಶೇಖರ್ ಗೌಡ ಉಪಸ್ಥಿತರಿದ್ದರು.
