10ರ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ ಆರೋಪಿ ಬಂಧನ
ವೃದ್ಧನೋರ್ವ 10 ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಚಾಮರಾಜನಗರದಲ್ಲಿ ಕೇಳಿಬಂದಿದೆ.
ಚಾಮರಾಜನಗರ : 10 ವರ್ಷ ವಯಸ್ಸಿನ ಬಾಲಕಿ ಮೇಲೆ ವೃದ್ಧನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಗ್ರಾಮದ ಮಹದೇವಪ್ಪ(65) ಎಂಬಾತ ಬಂಧಿತ ಆರೋಪಿ. ಸಂತ್ರಸ್ತ ಬಾಲಕಿಗೆ ಆರೋಪಿ ಕೆನ್ನೆ ಸವರುವುದು, ಮುತ್ತು ಕೊಡುವುದು ಮಾಡುತ್ತಿದ್ದನಂತೆ. ತಾತನ ಸಮಾನವೆಂದು ಸಾಮಾನ್ಯವಾಗಿಯೇ ಪಾಲಕರು ಭಾವಿಸಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಬಾಲಕಿಯು ಮನೆಗೆ ತೆರಳುತ್ತಿದ್ದಾಗ ವೃದ್ಧನು ಬಾಲಕಿಯ ಪಾಲಕರು ಮನೆಯಲ್ಲಿ ಇಲ್ಲದ್ದನ್ನು ಗಮನಿಸಿ ಲೈಂಗಿಕ ದೌರ್ಜನ್ಯವೆಸಗಿ, ದೇಹದ ಹಲವೆಡೆ ಪರಚಿ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಸಪ್ಪೆ ಮೋರೆ ಹಾಕಿಕೊಂಡಿದ್ದನ್ನು ಗಮನಿಸಿದ ಪಾಲಕರು ವಿಚಾರಿಸಿದಾಗ ವೃದ್ಧನ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಬೇಗೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.
ಅತ್ಯಾಚಾರಕ್ಕೆ ಯತ್ನ– 5 ವರ್ಷ ಕಠಿಣ ಶಿಕ್ಷೆ : ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಗ್ರಾಮದ ರಂಗಸ್ವಾಮಿ(26) ಶಿಕ್ಷೆಗೊಳಗಾದ ಅಪರಾಧಿ. 2020ರ ಅ.1ರಂದು ತಾಲೂಕಿನ ಗ್ರಾಮವೊಂದರ ಜಮೀನಿನಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಳು. ಇಲ್ಲಿಗೆ ಬಂದ ರಂಗಸ್ವಾಮಿ ಮಹಿಳೆಯನ್ನು ಸೊಪ್ಪು ಖರೀದಿಸುವ ನೆಪದಲ್ಲಿ ಮಾತನಾಡಿಸಿದ್ದ. ಈಕೆಯಿಂದ ಸೊಪ್ಪು ತೆಗೆದುಕೊಂಡ ಬಳಿಕ ಹಿಂಬಾಲಿಸಿಕೊಂಡು ಹೋಗಿ ಗಾಯಗೊಳಿಸಿ, ಅತ್ಯಾಚಾರ ಮಾಡಲು ಯತ್ನಿಸಿದ್ದ. ಈ ವೇಳೆ ಮಹಿಳೆ ಜೋರಾಗಿ ಕೂಗಿಕೊಂಡ ಶಬ್ಧ ಕೇಳಿ ಅಕ್ಕಪಕ್ಕದ ಜಮೀನಿನವರು ಅಲ್ಲಿಗೆ ಬಂದಿದ್ದಾರೆ. ಆಗ ಅವರನ್ನು ಕಂಡೊಡನೆ ಮಹಿಳೆಯಿಂದ ಸರ ಕಿತ್ತುಕೊಂಡು ಬೈಕ್ ಬಿಟ್ಟು ರಂಗಸ್ವಾಮಿ ಸ್ಥಳದಿಂದ ಪರಾರಿಯಾಗಿದ್ದ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್. ಜೆ. ಕೃಷ್ಣ ಅವರು, ರಂಗಸ್ವಾಮಿಗೆ 5 ವರ್ಷ ಕಠಿಣ ಶಿಕ್ಷೆ ಮತ್ತು ನೊಂದ ಮಹಿಳೆಗೆ 16 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ನೊಂದ ಮಹಿಳೆಯ ಪರವಾಗಿ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್ ವಾದ ಮಂಡಿಸಿದ್ದರು.
ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ (ಶಿವಮೊಗ್ಗ) : ಮದುವೆಯಾಗುವುದಾಗಿ ನಂಬಿಸಿ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯುವಕನಿಗೆ(23) ಶಿವಮೊಗ್ಗದ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಇತ್ತೀಚಿಗೆ ಆದೇಶ ಹೊರಡಿಸಿತ್ತು.
